text
stringlengths
0
61.5k
] ಹಾಗಾಗಿಯೇ ಉತ್ತರದ ಮಂಡನಮಿಶ್ರರು ದೀಕ್ಷೆಪಡೆದು ಸುರೇಶ್ವರಾಚಾರ್ಯರಾಗಿ ದಕ್ಷಿಣಾಮ್ನಾಯ ಶೃಂಗೇರಿಯ ಶಾರದಾಪೀಠವನ್ನು ಅಲಂಕರಿಸಿದರು. ಅವರಿಂದ ದೀಕ್ಷೆ ಪಡೆದ ಯಾರೇ ಇದ್ದರೂ ಅದು ಶೃಂಗೇರಿಯ ಪರಂಪರೆಗೆ ಸೇರಿದ್ದೆಂದೇ ಅರ್ಥ.
ತುಘಲಕ್ ದರ್ಬಾರಿನಲ್ಲಿ ತಂದೆಯನ್ನು ಸೆರೆಗಟ್ಟಿ ಮಗ ಅರಸನಾಗುವ ಪರಂಪರೆ ಇದ್ದಿದ್ದು ಕಾಣುತ್ತದೆ; ನಮ್ಮ ಗ್ರಾಮ್ಯ ಭಾಷೆಯಲ್ಲಿ 'ಅಪ್ಪನನ್ನು ತಳ್ಳಾಕಿ ಮಗ ಮಾವಿನಹಣ್ಣು ಹೆಕ್ಕೋದು' ಅಂತ ಕರೀತಾರೆ. ಅದೇರೀತಿಯಲ್ಲಿ ಅನಧಿಕೃತವಾಗಿ ತಮ್ಮ ಹಕ್ಕುಸ್ಥಾಪನೆಗೆ ಹೊರಟ ಕೆಲವರ ಗುಂಪುಗಾರಿಕೆಯಿಂದ ತುಂಡುಮಠಗಳು ಮೇಲೆದ್ದು, ಅಲ್ಲಿನ ಸನ್ಯಾಸಿಗಳು ತಾವೇ ನಿಜವಾದ ಜಗದ್ಗುರುಗಳು ಎಂದು ಮೆರೆಯಹತ್ತಿದರು! ಇದು ಸತ್ಯಸ್ಯ ಸತ್ಯ.
ನಂತರ ಪೀಠ, ಪರಂಪರೆ, ಗುರುಶಾಪ, ಸರ್ವನಾಶ ಇತ್ಯಾದಿ ಪದಗಳಿಂದ ಭೀತಿ ಹುಟ್ಟಿಸಿ ಶಿಷ್ಯಸಮುದಾಯವನ್ನು ತಮಗೆ ಬೇಕಾದಂತೆ ಇರಿಸಿಕೊಂಡರು. ಶಂಕರರ ನಂತರ ಇದೇ ರೀತಿಯ ಭಿನ್ನಧೋರಣೆಗಳೇ ಸ್ಫೋಟಿಸಿ ಇನ್ನೆರಡು ಪಂಥಗಳು ಹುಟ್ಟಿಕೊಂಡವಾದರೂ ಶಂಕರರು ಪ್ರತಿಪಾದಿಸಿದ ಅದ್ವೈತವೇ ಅತ್ಯಂತ ವೈಜ್ಞಾನಿಕವೆಂದು ಕಾಲಕಾಲಕ್ಕೂ ವಿಜ್ಞಾನಿಗಳಿಗೂ ಗೋಚರಿಸಿ ಇಂದಿಗೂ ಜಗಮನ್ನಣೆ ಪಡೆದಿದೆ.
ಈಗ ಬಿಡಿ, ಎಲ್ಲಿನೋಡಿದರೂ ಗಲ್ಲಿಗಲ್ಲಿಗೊಬ್ಬ ಜಗದ್ಗುರು! ಯಾರು ದೀಕ್ಷೆ ಕೊಟ್ಟರು? ಯಾವ ಯತಿನಿಯಮಗಳನ್ನು ಅವರು ಪಾಲಿಸುತ್ತಾರೆ? ಆಧ್ಯಾತ್ಮ ಮಾರ್ಗದಲ್ಲಿ ಅವರ ಸಾಧನೆ ಏನು? ಅದೆಲ್ಲಯಾವುದೂ ಇಲ್ಲ. ಹಗಲೆಲ್ಲ ಕಾವಿ ವೇಷಹಾಕಿ ರಾತ್ರಿಯಲ್ಲಿ ಎಲ್ಲವನ್ನೂ ಬಿಚ್ಚೆಸೆದು ಜೀನ್ಸ್ ಹಾಕಿಕೊಳ್ಳುವಂಥವರೂ 'ಜಗದ್ಗುರು' ಎಂಬ ಪದವನ್ನು ಬಳಸುತ್ತಾರೆ. ಅವರನ್ನೆಲ್ಲ ಕಂಡಾಗ ಯಾರೂ ನಿಯಂತ್ರಿಸುವವರೇ ಇಲ್ಲವಾದರಲ್ಲ ಎನಿಸುತ್ತದೆಲ್ ಧರ್ಮಗ್ಲಾನಿಗೆ ಇಂಥವರೇ ಮೂಲ ಕಾರಣವಾಗುತ್ತಾರೆ.
ಜಗದ್ಗುರುವೆನ್ನಿಸಲು ಜಗತ್ತಿಗೆ ಗುರುವಾಗಬಲ್ಲ ಅಸಾಮಾನ್ಯತೆಯನ್ನು ಹೊಂದಿರಬೇಕಾಗುತ್ತದೆ. "ಹದಿನಾರು ಸಾವಿರ ಮಹಿಳೆಯರನ್ನು ಮದುವೆಯಾದ, ಅದೇನು ಮಹಾ? ಅವಕಾಶ ಕೊಟ್ಟರೆ ನಾವೂ ಆಗ್ತೇವೆ" ಎಂದು ಕೃಷ್ಣನನ್ನು ಮೂದಲಿಸುವ ಜನ ಅವ ಕಿರು ಬೆರಳಲ್ಲಿ ಪರ್ವತವನ್ನೆತ್ತಿದ ಎಂದಾಗ ಜಾಗ ಖಾಲಿಮಾಡುತ್ತಾರೆ! ಅದೇ ಕೃಷ್ಣ ಯುದ್ಧಭೂಮಿಯಲ್ಲಿ ಅರ್ಜುನನನ್ನು ಸಾಂಕೇತಿಕ ವ್ಯಕ್ತಿಯನ್ನಾಗಿಸಿಕೊಂಡು ಗೀತೆಯನ್ನು ಬೋಧಿಸುತ್ತಾನೆ.
ವಾಸ್ತವವಾಗಿ ಹದಿನಾರು ಸಾವಿರ ಮಹಿಳೆಯರ ಗಂಡನಾಗುವ ಬಯಕೆ ಅವನಲ್ಲಿರಲಿಲ್ಲ; ನರಕಾಸುರನ ಸೆರೆಯಿಂದ ಬಿಡುಗಡೆಗೊಂಡ ಮಹಿಳೆಯರು ರಕ್ಷಣೆಗಾಗಿ ಕೋರಿದಾಗ ಹಾಗೆ ಹೇಳಿದ್ದಾನೆ; ಒಬ್ಬನಿದ್ದವ ಏಕಕಾಲಕ್ಕೆ ಹದಿನಾರು ಸಾವಿರ ಕೃಷ್ಣರಾಗಿ ಅವರನ್ನು ರಮಿಸಿದ್ದಾನೆ!
ತೊನೆಯಪ್ಪ ಶೀಗಳು ಏಕಾಂತದಲ್ಲಿ ಒಬ್ಬೊಬ್ಬರನ್ನಾಗಿ ಕರೆದು ಸಂಭೋಗಿಸುತ್ತಾರೆ. ಅವರು ಏಕಕಾಲಕ್ಕೆ ತುಂಡು ಮಠದ ಎಲ್ಲಾ ಬ್ರಾಂಚುಗಳಲ್ಲೂ ಏಕಾಂತ ನಡೆಸಿ ತೋರಿಸಿದರೆ "ಹೌದಪ್ಪಾ, ನಮ್ಮ ಶೀಗಳು ಕೃಷ್ಣಾವತಾರ" ಎನ್ನಬಹುದಿತ್ತು. ಅದೆಲ್ಲ ಬಿಟ್ಟು ಈಗ ಹೇಗೂ ತನಗೆ ಜೈಲೇ ಗತಿ ಎಂಬುದು ಖಾತ್ರಿಯಾದ ನಂತರ ಜನರನ್ನು ಬೇರೆ ಬೇರೆ ಹೆಸರುಗಳಲ್ಲಿ ಸಂಘಟಿಸಿ "ಒಟ್ಟಿಗೇ ಇರೋಣ, ಒಗ್ಗಟ್ಟಿನಿಂದಿರೋಣ. ಏನೇ ಬಂದರೂ ಒಟ್ಟಾಗಿಯೇ ಎದುರಿಸೋಣ." ಎನ್ನುತ್ತ 'ಸುವರ್ಣ ಮಂತ್ರಾಕ್ಷತೆ' ನೀಡುತ್ತಿದ್ದಾರೆ.
ದೇವರಜನಾಂಗಕ್ಕೆ ಸರಕಾರ ಸಕಲ ಸೌಲಭ್ಯಗಳನ್ನೂ ಒದಗಿಸುತ್ತಿದೆ. ಯಾರೋ ಹೇಳಿದಂತೆ, ಈಗ ದಲಿತರು ನಾವು. ಈ ಸಮಾಜದ ಬಡಪಾಯಿಯನ್ನೂ ಬಿಡದೆ ಹಲವರ ಚರ್ಮವನ್ನು ಮಾತ್ರ ಬಿಟ್ಟು, ಅಲ್ಲಿಯವರೆಗೂ ಸುಲಿದು ಸಂಗ್ರಹಿಸಿದ ಹಣದಲ್ಲಿ ಮೂರ್ನಾಲ್ಕು ಲಕ್ಷ ರೂಪಾಯಿಗಳನ್ನು ದೇವರಜನಾಂಗದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದ್ದಾರೆ-ಕಚ್ಚೆಶೀಗಳು. "ನನ್ನ ಚಡ್ಡಿ ತೊಳೀರ್ರ, ನಿಮಗೆ ಜೈಲಾಗುದ್ನ ತಪ್ಪಸ್ತೀಮಿ" ಅಂತ ದೇವರಜನಾಂಗದ ತಿಪ್ಪ ಹೇಳಿದರೆ ಅದನ್ನು ಮಾಡಲೂ ತಯಾರಿದ್ದಾರೆ ತೊನೆಯಪ್ಪ ಶೀಗಳು.
ಒಟ್ಟಿನಲ್ಲಿ ಪರಿಸ್ಥಿತಿ ಎಲ್ಲಿಗೆ ಬಂದಿದೆಯಪ್ಪ ಅಂದರೆ ಕತ್ತೆ ಸಿಕ್ಕಿದರೂ ಕಾಲು ಹಿಡಿದು ಜೈಲು ಶಿಕ್ಷೆಯನ್ನು ತಪ್ಪಿಸು ಎಂದು ಬೇಡಿಕೊಳ್ಳುವ ಹಂತವನ್ನು ತಲ್ಪಿದೆ. ಶಿಕ್ಷೆ ತಪ್ಪಿಸಲು ಅತ್ತ ಒಳಗಿನಿಂದ ಬಹಳ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಇನ್ನೂ ಪೂರ್ತಿ ರೂಟು ಸಿಕ್ಕಿಲ್ಲ.
ಮುಸುಕಿನಲ್ಲಿ ಮಠದ ಲಂಪಟರು ಮಾಂಸಹಾರವನ್ನೂ ಸಹ ಸೇವಿಸುತ್ತಾರೆ. ಗುಂಡು ಹಾಕುತ್ತಾರೆ. ಬೆಳಗಾದರೆ ಶಿಷ್ಯರ ತಲೆಗೊಂದರಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಭಟ್ಟಂಗಿಗಳು ಬಕರಾಭಕ್ತರಿಗೆ ಪೋಸು ನೀಡುವಾಗ ಇದನ್ನೆಲ್ಲ ಹೊರಗೆ ತೋರಿಸೋದಿಲ್ಲ. ಗುಂಡು-ತುಂಡು ತಿಂದು ತೊನೆದಾಡುತ್ತ ಹಾದರ ನಡೆಸುವ ವ್ಯಕ್ತಿ ಗುರುವೆನಿಸಲು ಯೋಗ್ಯನೇ? ನೀವೆಲ್ಲ ನಿರ್ಧಾರ ಮಾಡಬೇಕಾದ ಸಮಯ ಮೀರಿಹೋಗಿದೆ!
ಕಾಲೇಜು ಅಧ್ಯಾಪಕರೊಬ್ಬರು ತರಗತಿ ನಡೆಸುತ್ತಿದ್ದಾಗ ಉಂಡಾಡಿಗುಂಡ ವಿದ್ಯಾರ್ಥಿಯೊಬ್ಬ ತಡವಾಗಿ ಪ್ರವೇಶಿಸಿದನಂತೆ. "ಮೇಡಮ್ ನನ್ನ ಕೈಯಲ್ಲಿ ಹಕ್ಕಿಯಿದೆ. ಅದು ಸತ್ತಿದೆಯೋ ಜೀವಂತ ಇದೆಯೋ ಎಂದು ಹೇಳಬೇಕು" ಎಂದನಂತೆ. ಹಿಂದಿನ ತರಗತಿಗಳಲ್ಲಿ ಪ್ರಶ್ನೆಕೇಳಿದಾಗ ತಪ್ಪು ಉತ್ತರ ನೀಡಿ ಅವಮಾನಿತನಾಗಿದ್ದಕ್ಕೆ ಮುಯ್ಯಿ ತೀರಿಸಿಕೊಳ್ಳಲು ಹವಣಿಸುತ್ತಿದ್ದಾನೆ ಅವ ಎಂದು ಮಹಿಳಾ ಅಧ್ಯಾಪಕಿಗೆ ಗೊತ್ತಾಯಿತಂತೆ.
ಕೈಯಲ್ಲಿದ್ದ ಹಕ್ಕಿಗೆ ಜೀವ ಇತ್ತು, ಅಧ್ಯಾಪಕಿ "ಹಕ್ಕಿ ಸತ್ತಿದೆ" ಎಂದರೆ ಜೀವಂತ ಇದೆಯೆಂದು ಹಾರಿಬಿಟ್ಟು ತಪ್ಪು ಹೇಳಿದ್ದಕ್ಕೆ ಅವಮಾನ ಮಾಡೊ ಉದ್ದೇಶ ಗುಂಡನಲ್ಲಿತ್ತು; "ಹಕ್ಕಿ ಜೀವಂತವಾಗಿದೆ" ಎಂದರೆ ಅಮುಕಿಹಿಡಿದು ಸಾಯಿಸಿ "ಹಕ್ಕಿ ಸತ್ತಿದೆ ನೋಡಿ" ಎಂದು ಎಲ್ಲರೆದುರು ಗೇಲಿ ಮಾಡೋದು ಅವನ ಹುನ್ನಾರವಾಗಿತ್ತು. ಕ್ಷಣಕಾಲ ಯೋಚಿಸಿದ ಮೇಡಮ್ಮು ಜಾಣ್ಮೆಯ ಉತ್ತರವನ್ನು ಹೇಳಿದರು-"ಹಕ್ಕಿಯ ಜೀವ ನಿನ್ನ ಕೈಯಲ್ಲಿದೆ"
ಇಂದು ಸಮಾಜದ ಸ್ಥಿತಿ ಗುಂಡನ ಅಂಗೈಯಲ್ಲಿ ಬಂಧಿಯಾದ ಹಕ್ಕಿಯಂತಿದೆ. ಗುಂಡ ಯಾರೆಂದು ಹೇಳಬೇಕಿಲ್ಲವಲ್ಲ? "ಹೌದಪ್ಪಾ ಗುಂಡಾ, ನೀನು ಹೇಳಿದ್ದೂ ಹೌದು, ನಾವು ಕೇಳಿದ್ದೂ ಹೌದು, ಹಕ್ಕಿಯ ಜೀವ ನಿಲ್ಲ ಕೈಲಿದೆ" ಅಂತ ತಿಳಿಸಿ ಮುಷ್ಠಿಬಿಗಿತದಿಂದ ಸಮಾಜವನ್ನು ರಕ್ಷಿಸಬೇಕಾಗಿದೆ. ಬ್ರಿಟಿಷರು ಬಿಟ್ಟು ಹೋದಾಗ ನಮಗೆ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯವಲ್ಲ; ತೊನೆಯಪ್ಪ ಬಿಟ್ಟು ಹೋದಾಗ ಸಿಗುವುದು ನಿಜವಾದ ಸ್ವಾತಂತ್ರ್ಯ ಎಂಬಲ್ಲಿಗೆ ತುಮರಿಯ ಇಂದಿನ ಪ್ರವಚನಕ್ಕೆ ಮಂಗಳವೆಂತ ಅಪ್ಪಣೆಯಾಗುತ್ತದೆ.
ಮತ್ತೆ ಕಟ್ಟೆಯೊಡೆದ ಮಡಿವಾಳ ಕೆರೆ, ವಾಹನ ಸಂಚಾರ ಸ್ಥಗಿತ | ಧಾರಾಕಾರ ಮಳೆಗೆ ಅಸ್ತವ್ಯಸ್ಥವಾದ ನಗರದ ಜನತೆ-Madivala tank overflows, vehicle movement totally disrupted - Kannada Oneindia
ಮತ್ತೆ ಕಟ್ಟೆಯೊಡೆದ ಮಡಿವಾಳ ಕೆರೆ, ವಾಹನ ಸಂಚಾರ ಸ್ಥಗಿತ
| Published: Friday, September 14, 2007, 16:11 [IST]
ಬೆಂಗಳೂರು, ಸೆಪ್ಟೆಂಬರ್ 14: ಗುರುವಾರವೂ ಮುಂದುವರಿದ ಮಳೆಗೆ ಬೆಂಗಳೂರು ಭಾಗಶಃ ತೇಲಾಡುತ್ತಿದೆ. ಬುಧವಾರ ರಾತ್ರಿ 8 ಸೆಂ.ಮೀ. ಮಳೆ ಸುರಿದರೆ ಗುರುವಾರ ಸಾಯಂಕಾಲದಿಂದಲೇ ಪ್ರಾರಂಭವಾದ ಮಳೆ ಶುಕ್ರವಾರ ಮುಂಜಾವಿನವರೆಗೂ ಹನಿಯುತ್ತಲೇ ಇತ್ತು.
ಕಳೆದ ವರ್ಷ ಸ್ವಲ್ಪ ಬಿಡುವು ತೆಗೆದುಕೊಂಡಿದ್ದ ಮಳೆ ಈ ವರ್ಷ ಮತ್ತೆ ತನ್ನ ಆರ್ಭಟವನ್ನು ತೋರಿಸಿದೆ. ಎರಡು ವರ್ಷದ ಹಿಂದಿನಂತೆ ಬೃಹತ್ ಮಡಿವಾಳ ಕೆರೆ ಕಟ್ಟೆಯೊಡೆದಿದೆ. ಬೊಮ್ಮನಹಳ್ಳಿ, ಬೇಗೂರು ಸುತ್ತಲಿನ ಪ್ರದೇಶಗಳು ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.
ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ನಿರ್ಮಿಸಲಾಗುತ್ತಿರುವ ಫ್ಲೈಓವರ್ ಕಾಮಗಾರಿಯಿಂದ ಪ್ರತಿದಿನ ಕುಂಟುತ್ತ ಸಾಗುತ್ತಿದ್ದ ವಾಹನ ಸಂಚಾರ ಇಂದು ನಿಂತಲ್ಲೇ ನಿಂತುಬಿಟ್ಟಿದೆ. ರಾತ್ರಿಪಾಳಿ ಮುಗಿಸಿ ಬೆಳಿಗ್ಗೆ 6 ಗಂಟೆಗೆ ಬಿಟ್ಟ ಸಾಫ್ಟ್‌ವೇರ್ ಕಂಪನಿಗಳ ಬಸ್ಸುಗಳು ಮಡಿವಾಳಕ್ಕೆ ಬಂದು ತಲುಪಲು 5ರಿಂದ 6 ತಾಸು ತೆಗೆದುಕೊಳ್ಳುತ್ತಿವೆ.
ಯಾವುದು ಮೋರಿ ಯಾವುದು ರಸ್ತೆ. ವಾಹನದಲ್ಲಿ ಸಾಗುತ್ತಿದ್ದೇವೆಯೋ ದೋಣಿಯಲ್ಲಿ ಸಾಗುತ್ತಿದ್ದೇವೆಯೋ ಎಂಬಂಥ ಸ್ಥಿತಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡವರಿಗೆ. ಮಡಿವಾಳ ಫ್ಲೈಓವರ್ ಬಳಿ ಮೊಣಕಾಲುದ್ದ ನೀರು ನಿಂತಿದ್ದರಿಂದ ಎರಡು ನಾಲ್ಕು, ಆರು, ಎಂಟು ಚಕ್ರದ ಗಾಡಿಗಳು ನಿಂತಲ್ಲೇ ನಿಂತುಬಿಟ್ಟಿವೆ.
ಮಡಿವಾಳದ ಕಡೆಯಿಂದ ನಾರಾಯಣ ಹೃದಯಾಲಯಕ್ಕೆ, ಎಲೆಕ್ಟ್ರಾನಿಕ್ ಸಿಟಿಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹೋಗುವವರು ಪರದಾಡುವ ಸ್ಥಿತಿ ತಲೆದೋರಿದೆ.
ಹೊಸೂರು ರಸ್ತೆ, ಬಿಟಿಎಂ ಲೇಔಟ್‌ನ ಕೆಲವು ಕಛೇರಿ, ಅಪಾರ್ಟ್‌ಮೆಂಟಗಳಿಗೆ ನೀರು ನುಗ್ಗಿ ಜನ ಕಚೇರಿಗೆ ಹೋಗಲಾಗದೆ, ಮನೆ ಸೇರಲಾಗದೆ ಪರದಾಡುತ್ತಿದ್ದಾರೆ. ವೃದ್ಧರು ಹಾಗೂ ಮಕ್ಕಳನ್ನು ಕೈಹಿಡಿದು ರಸ್ತೆ ದಾಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ.
ಚಾಮರಾಜಪೇಟೆ, ಕೋರಮಂಗಲ, ವನ್ನಾರಪೇಟೆ, ಆಡುಗೋಡಿ, ಪ್ಯಾಲೇಸ್ ಗುಟ್ಟಹಳ್ಳಿ ಮುಂತಾದೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರಾತ್ರಿಯೆಲ್ಲಾ ಅಲ್ಲಿನ ಜನರು ಜಾಗರಣೆ ಮಾಡಬೇಕಾಯಿತು.
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಕುದಿ ಎಸರು.....ತಿಟ್ಹತ್ತಿ ತಿರುಗಿ ನೋಡಿದಾಗ...
Posted by ಸಿಂಧು sindhu at 12:32 PM
ಸಿಂಧು, ಈ ಪುಸ್ತಕದ ಪರಿಚಯವನ್ನು ಪತ್ರಿಕೆಯಲ್ಲಿ ಓದಿದಾಗಿನಿಂದ ಇದನ್ನು ಹುಡುಕುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ. ನಿಮ್ಮ ಬರಹವನ್ನು ಓದಿದ ಮೇಲೆ, ನನ್ನ ಹಂಬಲ ಇನ್ನಿಷ್ಟು ಜಾಸ್ತಿಯಾಗಿದೆ. ಈ ಪುಸ್ತಕದ ಪ್ರಕಾಶಕರ ವಿಳಾಸವನ್ನು ಕೊಡಲು ಸಾಧ್ಯವೆ? ಅವರಿಂದಲೇ ತರಸಲು ಸಾಧ್ಯವಾದೀತು.
ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ, ಬಿ.ಜಯಶ್ರೀಯವರ ಆತ್ಮಕಥೆ 'ಕಣ್ಣಾ ಮುಚ್ಚೆ ಕಾಡೇ ಗೂಡೇ' ಸಹ ಒಂದು ಉತ್ತಮ ಕೃತಿಯಾಗಿದೆ. ನೀವು ಓದಿರದಿದ್ದರೆ, ಕಳುಹಿಸಿಕೊಡುವೆ.
ಲಾಕ್ ಡೌನ್ ಎರಡನೇ ದಿನ : ನಿಲ್ಲದ ಜನರ ಓಡಾಟ - Sanjevani
Home ಜಿಲ್ಲೆ ರಾಯಚೂರು ಲಾಕ್ ಡೌನ್ ಎರಡನೇ ದಿನ : ನಿಲ್ಲದ ಜನರ ಓಡಾಟ
ಲಾಕ್ ಡೌನ್ ಎರಡನೇ ದಿನ : ನಿಲ್ಲದ ಜನರ ಓಡಾಟ
ರಾಯಚೂರು.ಏ.೨೯- ಲಾಕ್ ಡೌನ್‌ನ ಎರಡನೇ ದಿನ ಜನ ಸಂಚಾರ ನಿನ್ನೆಗಿಂತ ಅಧಿಕವಾಗಿ ರಸ್ತೆಗಳಲ್ಲಿ ಕಂಡು ಬಂದಿತು.
ಪೊಲೀಸರು ಆಟೋ, ದ್ವಿಚಕ್ರ ವಾಹನಗಳಲ್ಲಿ ಜಪ್ತಿ ಮಾಡಿ, ದಂಡ ವಿಧಿಸಿದರೂ, ಜನರ ಓಡಾಟ ಮಾತ್ರ ಅಲ್ಲಲ್ಲಿ ತೀವ್ರವಾಗಿಯೇ ಕಂಡು ಬಂದಿತು. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಕುಟುಂಬಗಳು ನಿಗದಿತ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಜನರನ್ನು ಸೇರಿಸುವ ಪರಿಪಾಠ ಮುಂದುವರೆದಿದೆ. ಕೊರೊನಾ ಮಹಾಮಾರಿಯ ತೀವ್ರತೆ ಮತ್ತು ಜನರ ಸಾವಿನ ಆಕ್ರಂದಗಳ ಮಧ್ಯೆ ಲಾಕ್ ಡೌನ ನಿಯಮ ಉಲ್ಲಂಘಿಸಿ, ಓಡಾಡುವವರಿಗೆ ಮತ್ತೇ ಮತ್ತೇ ಬುದ್ದಿ ಮಾತು ಹೇಳುವುದು ಇಂದು ಮುಂದುವರೆಯಿತು. ಇಂದು ನಗರದ ವಿವಿಧ ರಸ್ತೆಗಳಲ್ಲಿ ಅನೇಕ ಆಟೋಗಳನ್ನು ಜಪ್ತಿ ಮಾಡಲಾಯಿತು. ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಯಿತು. ದಂಡ ವಿಧಿಸುವುದಕ್ಕೇ ಲೆಕ್ಕವೇ ಇರಲಿಲ್ಲ.
ನಿನ್ನೆಯಿಂದ ೧೪ ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿತ್ತು. ನಿನ್ನೆ ಲಾಕ್ ಡೌನ್ ಬಿಗಿಯಾಗಿಯೇ ನಿರ್ವಹಿಸಲಾಯಿತು. ಆದರೆ, ಇಂದು ಜನರ ಓಡಾಟ ನಿನ್ನೆಗಿಂತ ತುಸು ಹೆಚ್ಚಾಗಿರುವುದು ಗಮನಾರ್ಹವಾಗಿತ್ತು. ಮಾರುಕಟ್ಟೆ ಬಂದ್ ಮಾಡಿದ್ದರೂ, ಜನರು ಎಲ್ಲಿಗೆ ಹೋಗುತ್ತಾರೆ ಎನ್ನುವುದು ಪೊಲೀಸರಿಗೆ ತಿಳಿಯದ ರಹಸ್ಯವಾಗಿತ್ತು. ವಿವಿಧ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾತ್ರವಲ್ಲದೇ, ಅನಗತ್ಯವಾಗಿ ಯುವಕರ ಓಡಾಟ ವ್ಯಾಪಕವಾಗಿತ್ತು. ಅಂಗಡಿ ಮುಂಗಟ್ಟುಗಳು ಯಥಾರೀತಿಯಲ್ಲಿ ಬಂದ್ ಮಾಡಲಾಗಿತ್ತು.
ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳಿಸಿತ್ತು. ಆದರೂ, ಜನರ ಓಡಾಟ ಮಾತ್ರ ಮುಂದುವರೆದಿತ್ತು. ಯಾರನ್ನೂ ಕೇಳಿದರೂ, ಆಸ್ಪತ್ರೆಯ ನೆಪ ಹೇಳಿ, ತಪ್ಪಿಸಿಕೊಳ್ಳಲಾಗುತ್ತಿತ್ತು. ನಿನ್ನೆ ಅಲ್ಲಲ್ಲಿ ಪೊಲೀಸರು ಲಾಠಿ ಬೀಸಿದ್ದರು. ಆದರೆ, ಇಂದು ಪೊಲೀಸರು ಮೃದುವಾಗಿಯೇ ವರ್ತಿಸಿದರು. ಪೊಲೀಸರ ಈ ಮೃದುತ್ವ ಜನರ ಓಡಾಟಕ್ಕೆ ಪ್ರೇರಣೆಯಾಯಿತೇ?. ಜಿಲ್ಲೆಯಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಜನರಲ್ಲಿ ಆತಂಕವೇ ಇಲ್ಲದಿದ್ದರೇ, ಇದನ್ನು ನಿಯಂತ್ರಿಸುವುದು ಹೇಗೆ ಎನ್ನುವ ಪ್ರಶ್ನೆ ಅಧಿಕಾರಿಗಳನ್ನು ಕಾಡುವಂತೆ ಮಾಡಿತು.
ಸೀತಾದೇವಿ – ಕಣಜ
Home/ವ್ಯಕ್ತಿ ಪರಿಚಯ/ಸೀತಾದೇವಿ
'ರಾಜರ್ಷಿ' – ಋಷಿಯಂತೆ ಬದುಕುವ ರಾಜ. ಇಂತಹ ಒಳ್ಳೆಯ ಹೆಸರನ್ನು ಪಡೆದಿದ್ದ ವಿದೇಹ ರಾಜ ವಂಶದ ಜನಕರಾಜ ಮಿಥೆಲೆಯಲ್ಲಿ ಧರ್ಮದಿಂದ ರಾಜ್ಯವಾಳುತ್ತಾ ಪ್ರಜಾವತ್ಸಲನಾಗಿದ್ದ. ಅವನಿಗೆ ಮಕ್ಕಳಿರಲಿಲ್ಲ.
ಭೂಮಿಯಲ್ಲಿ ಮಂದಾಸನ
ಒಂದು ಸಲ ಜನಕನು ಒಂದು ಯಜ್ಞಕಾರ್ಯಕ್ಕಾಗಿ ಭೂಮಿಯನ್ನುಳುತ್ತಿರುವಾಗ ಆತನಿಗೆ ಒಂದು ಚಿನ್ನದ ಮಂದಾಸನವು ಸಿಕ್ಕಿತು. ರಾಜನಿಗೆ ಆಶ್ಚರ್ಯವಾಯಿತು. ಅದರಲ್ಲಿ ಬಹು ಮುದ್ದಾದ ನೇತ್ರಾನಂದವನ್ನುಂಟು ಮಾಡುವ ಒಂದು ಹೆಣ್ಣು ಮಗುವಿತ್ತು. ರಾಜನಿಗೆ ತುಂಬ ಸಂತೋಷವಾಯಿತು. ನೇಗಿಲಿನಿಂದ ಉತ್ತ ಭೂಮಿಗೆ 'ಸೀತಾ' ಎನ್ನುತ್ತಾರೆ. ಆದ್ದರಿಂದ ಜನಕನು ಮಗುವಿಗೆ 'ಸೀತಾದೇವಿ' ಎಂದು ಹೆಸರಿಟ್ಟನು.
ಈ ಮಗುವಿನ ಕಾರಣ ರಾಜನಿಗೆ ಉನ್ನತ ದೆಸೆಯುಂಟಾಯಿತು. ಅಷ್ಟೇ ಅಲ್ಲ. ಆತನ ರಾಣಿಗೂ ಒಂದು ಹೆಣ್ಣು ಮಗುವಾಯಿತು. ಆ ಮಗುವಿಗೆ 'ಊರ್ಮಿಳಾ' ಎಂದು ಹೆಸರಿಟ್ಟ. ಇಬ್ಬರು ಹೆಣ್ಣು ಮಕ್ಕಳನ್ನೂ ವಾತ್ಸಲ್ಯದಿಮದ ರಾಜದಂಪತಿಗಳು ಬೆಳೆಸಿದರು. ಇಬ್ಬರಿಗೂ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದರು. ರೂಪಕ್ಕೆ ತಕ್ಕ ಗುಣದಿಂದ, ಗುಣವನ್ನು ಹೆಚ್ಚಿಸುವ ಜಾಣತನದಿಂದ, ಜಾಣತನ ಕಳೆಗಟ್ಟುವ ಸದ್ವಿದ್ಯೆಯಿಂದ, ವಿದ್ಯೆ ಸಾರ್ಥಕವಾಗುವ ವಿನಯ ವಿಧೇಯತೆಗಳಿಂದ ರಾಜಿಸುತ್ತ ಶೀಲ ಸಂಪನ್ನೆಯರಾಗಿದ್ದರು ರಾಜಪುತ್ರಿಯರು.
ವೈಷ್ಣವ ಧನುಸ್ಸೇ ಆಟದ ಕುದುರೆ!
ಒಂದು ದಿನ ಮಹರ್ಷಿ ಪರಶುರಾಮರು ಜನಕರಾಜನನ್ನು ನೋಡಲೆಂದು ಬಂದರು. ಅವರ ಕೈಯಲ್ಲಿ ಒಂದು ಧನುಸ್ಸಿತ್ತು. ಅದನ್ನು ರಾಜಸಭೆಯ ಮುಂಬಾಗಿಲಿಗೆ ಒರಗಿಸಿ ಮಹರ್ಷಿ ಒಳಕ್ಕೆ ಹೋದರು. ಬಾಲಕಿ ಸೀತಾ ಇದನ್ನು ನೋಡಿದಳು, ಓಡಿಬಂದಳು. ಆ ಧನುಸ್ಸನ್ನೇ ಎಳೆದುಕೊಂಡು ಕೋಲುಕುದುರೆ ಮಾಡಿಕೊಂಡು ಆಡುತ್ತಿದ್ದಳು. ಅದು ವೈಷ್ಣವ ಧನುಸ್ಸು. ಅದನ್ನೆತ್ತಲು ಮಹಾಬಲ, ಪರಾಕ್ರಮಗಳಿದ್ದವರಿಗೇ ಸಾಧ್ಯ. ಮಹರ್ಷಿಯು ಮಾತುಕತೆಗಳನ್ನು ಮುಗಿಸ ಹೊರಗೆ ಬಂದು ನೋಡಿದರು – ಧನುಸ್ಸಿಲ್ಲ! ಈ ಧನುಸ್ಸನ್ನು ಅಲ್ಲಾಡಿಸುವುದೇ ಕಷ್ಟ, ಇದು ಎಲ್ಲಿ ಹೋಯಿತು. ಎಂದು ಸುತ್ತ ನೋಡಿದರೆ-ಹುಡುಗಿ ಸೀತೆಗೆ ಅದು ಕುದುರೆಯಾಗಿದೆ! ಮಹರ್ಷಿಗೂ ಬೀಳ್ಕೊಡಲು ಬಂದ ಜನಕರಾಜನಿಗೂ ತುಂಬ ಆಶ್ಚರ್ಯವಾಯಿತು.
ಮಹರ್ಷಿ ಬಾಲಕಿಯನ್ನು ಹರಸಿದರು. ಜನಕರಾಜನನ್ನು ಕುರಿತು , "ದೊರೆಯೇ ! ಇಂತಹ ಅಸಾಧಾರಣ ಶಕ್ತಿವಂತೆಯನ್ನು ಮದುವೆಯಾಗಲು ಮಹಾಪರಾಕ್ರಮಿಯೇ ಅರ್ಹನು. ಅದಕ್ಕಾಗಿ ನೀನು ಸ್ವಯಂವರನ್ನೇರ್ಪಡಿಸು. ಪರಾಕ್ರಮಿಯೇ ಈಕೆಯನ್ನು ವರಿಸಲಿ" ಎಂದು ಹೇಳಿದರು.
ಸೀತೆ, ಊರ್ಮಿಳೆಯರು ದೊಡ್ಡವರಾದರು.
ಶಿವ ಧನುಸ್ಸನ್ನು ಗೆದ್ದ ವೀರನೇ ಸೀತೆಯ ಪತಿ
ವೈಷ್ಣವ ಧನುಸ್ಸನ್ನು ಲೀಲಾಜಾಲವಾಗಿ ಆಟದ ಕುದುರೆಯನ್ನಾಗಿ ಮಾಡಿಕೊಂಡ ಹುಡುಗಿಗೆ ತಕ್ಕ ಪುರುಷ ಸಿಂಹನನ್ನು ಹುಡುಕುವುದು ಹೇಗೆ?
ಆ ರಾಜಮನೆತನಕ್ಕೆ ಪರಂಪರೆಯಾಗಿ ಬಂದ ಶಿವಧನಸ್ಸೊಂದು ಜನಕರಾಜನಲ್ಲಿತ್ತು. ಆತನು ಹೀಗೆ ನಿಶ್ಚಯ ಮಾಡಿದನು – ಶಿವ ಧನುಸ್ಸನ್ನು ಎತ್ತಿ ಬಾಣ ಹೂಡಬಲ್ಲ ವೀರನಿಗೇ ಸೀತಾದೇವಿಯನ್ನು ಕೊಡುವುದು. ಹೀಗೆಂದು ರಾಜನು ಸ್ವಯಂವರವನ್ನೇರ್ಪಡಿಸಿದನು.
ಸೀತೆ ಬಹು ಸುಂದರಿ. ಅವಳನ್ನು ಮದುವೆಯಾಗಲು ದೇಶವಿದೇಶಗಳಿಂದ ರಾಜರು ಬಂದರು. ಆದರೆ ಧನುಸ್ಸನ್ನು ನೋಡುತ್ತಲೇ ಗಾಬರಿಯಾಗಿ , "ಅಬ್ಬಾ, ಇದು ಮನುಷ್ಯರಿಗೆ ಸಾಧ್ಯವಲ್ಲ" ಅನ್ನುತ್ತಾ ಅದಕ್ಕೆ ಕೈಮುಗಿದು ಹಿಂದಕ್ಕೆ ಹೋದರು.
ವಿಶ್ವಾಮಿತ್ರ ಮಹರ್ಷಿಯು ತನ್ನ ಶಿಷ್ಯರಾದ ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಗೆ ಬಂದರು. ಆ ಶಿಷ್ಯರು ರಾಜಪುತ್ರರು, ಅಯೋಧ್ಯಾ ದೇಶಾಧಿಪತಿಯಾದ ದಶರಥರಾಜನ ಮಕ್ಕಳು. ಅವರಿನ್ನೂ ತರುಣರು, ಆದರೆ ರಾಕ್ಷಸರನ್ನು ಗೆದ್ದಿದ್ದರು. ಮಹರ್ಷಿಯ ಮತತು ರಾಮಲಕಷ್ಮಣರ ಆಗಮನದಿಂದ ಜನಕರಾಜನಿಗೆ ಬಹಳ ಸಂತೋಷವಾಯಿತು. ಹಿರಿಯನಾದ ಶ್ರೀರಾಮನಿಗೆ ವಿಶ್ವಾಮಿತ್ರರು ಹೀಗೆ ಹೇಳಿದರು: ರಾಮಚಂದ್ರಾ! ಮಹಾಶಿವನನ್ನು ಧ್ಯಾನ ಮಾಡು. ಆಮೇಲೆ ಧನುಸ್ಸನ್ನು ಕೈಗೆ ತೆಗೆದುಕೊ." ಶ್ರೀರಾಮನು ಮೊದಲು ಮಹಷಿಗೆ ನಮಸ್ಕರಿಸಿದನು. ಧನುಸ್ಸಿಗೆ ಬಳಿಗೆ ಬಂದು ಮೂರು ಸಲ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಶಿವಸ್ಮರಣೆ ಮಾಡಿ ಅದಕ್ಕೆ ಕೈ ಹಾಕಿದನು. ಅದನ್ನು ಲೀಲಾಜಾಲವಾಗಿ ಮೇಲೆತ್ತಿ ಬಾಣ ಹೂಡಿದನು; ಧನುಸ್ಸು ಮಹಾಧ್ವನಿಯನ್ನು ಮಾಡುತ್ತಾ ಮುರಿದು ಹೋಯಿತು. ಸೀತಾದೇವಿಯು ಬಂದು ಶ್ರೀರಾಮನ ಕೊರಳನ್ನು ಹಾರದಿಂದಲಂಕರಿಸಿದಳು. ದಶರಥನಿಗೆ ಶ್ರೀರಾಮನ ಸಾಹಸದ ಸುದ್ದಿ ಹೋಯಿತು. ರಾಜಪರಿವಾರದೊಂದಿಗೆ ಇಷ್ಟಮಿತ್ರರೊಂದಿಗೆ ದಶರಥ ರಾಜನು ಮಿಥಿಲೆಗೆ ಬಂದನು. ಅತ್ಯಂತ ವಿಜೃಂಭಣೆಯಿಂದ ಶ್ರೀರಾಮ-ಸೀತೆಯರ ವಿವಾಹ ನೆರವೇರಿತು.
ಸೀತಾರಾಮನಿಗೆ ಪಟ್ಟಾಭಿಷೇಕ
ದಶರಥರಾಜನು ಬಹು ಸುಖಸಂತೋಷಗಳಿಂದ ಹಲವು ವರ್ಷಗಳನ್ನು ಕಳೆದನು. ಆದರೆ ಅವನಿಗೆ ಮುಪ್ಪು ತಲೆ ಹಾಕಿತು. ರಾಜ್ಯಭಾರ ಸಾಕೆನಿಸಿತು. ತಾನು ನಿಶ್ಚಿಂತನಾಗಿ ಭಗವಮತನ ಧ್ಯಾನದಲ್ಲಿ ದಿನಗಳನ್ನು ಕಳೆಯಬೇಕು ಎಂದು ರಾಜನು ಆಲೋಚಿಸಿದನು. ನ್ಯಾಯವಾಗಿ ಪುತ್ರರಲ್ಲಿ ಜ್ಯೇಷ್ಠನಾದ ರಾಮನೇ ರಾಜನಾಗಬೇಕು. ದಶರಥನು ಮಂತ್ರಿ ಪುರೋಹಿತರೊಂದಿಗೆ ಸಮಾಲೋಚನೆ ನಡೆಸಿ ಶ್ರೀರಾಮನ ಪಟ್ಟಾಭಿಷೇಕವನ್ನು ನಿಶ್ಚಯ ಮಾಡಿದನು.
ಆ ಶುಭದಿನದಂದು ರಾಜನ ಆನಂದಕ್ಕೆ ಪಾರವಿಲ್ಲ. ಆತನ ಹಿರಿಯ ರಾಣಿ, ಶ್ರೀರಾಮನ ಮಾತೆ ಕೌಸಲ್ಯಾದೇವಿ ವ್ರತೋಪವಾಸಗಳನ್ನು ಮಾಡಿ ದೇವ ಬ್ರಾಹ್ಮಣರ ಸೇವೆಯಲ್ಲಿ ನಿರತಳಾಗಿದ್ದಾಳೆ. ಪ್ರಜೆಗಳೆಲ್ಲ ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಂಭ್ರಮಿಸುತ್ತಿದ್ದಾರೆ.
ಪಟ್ಟಾಭಿಷೇಕವಲ್ಲ, ಕಾಡು
ದಶರಥನ ಮೂರನೆಯ ಹೆಂಡತಿ ಕೈಕಯಿ. ಅವಳಿಗೂ ಶ್ರೀರಾಮನಲ್ಲಿ ಬಹು ಪ್ರೀತಿ. ಆದರೆ ಮಂಥರೆ ಎಂಬ ಸಖಿಯ ಮಾತನ್ನು ಕೇಳಿ, ತನ್ನ ಮಗ ಭರತನಿಗೇ ರಾಜ್ಯವಾಗಬೆಕು ಎಂದು ಹಠ ಹಿಡಿದಳು. ಹಿಂದೆ ಒಮ್ಮೆ ದಶರಥನು ಅವಳು ಕೇಳಿದಾಗ ಎರಡು ವರಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದ. ಮೊದಲನೆಯ ವರವಾಗಿ ಭರತನಿಗೆ ಪಟ್ಟಾಭಿಷೇಕ, ಎರಡನೆಯ ವರವಾಗಿ ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು ಎಂದು ಕೇಳಿದಳು. ದಶರಥನಿಗೆ ದಿಗ್ಭ್ರಮೆಯಾಯಿತು. ಅವನು ಎಷ್ಟೇ ಬೇಡಿದರೂ ಕೈಕಯಿ ತನ್ನ ಹಠವನ್ನು ಬಿಡಲಿಲ್ಲ.
ಶ್ರೀರಾಮನಿಗೆ ವಿಷಯವು ತಿಳಿಯಿತು.
ಅವನು ತಂದೆಯನ್ನು ಸಂತೈಸಿ ಆತನ ಸತ್ಯವಚನವನ್ನು ಪಾಲಿಸುವುದಕ್ಕಾಗಿ ವನವಾಸಿಯಾಗಲು ನಿಶ್ಚಯಿಸಿದನು. ಪಟ್ಟಾಭೀಷೇಕಕ್ಕಾಗಿ ಅಲಂಕೃತನಾಗಿದ್ದವನು ರಾಜ ಯೋಗ್ಯವಾದ ಅಲಂಕಾರಗಳನ್ನೆಲ್ಲ ಕಳಚಿ ತಪಸ್ವಿಯಂತೆ ನಾರುಬಟ್ಟೆಯನ್ನುಟ್ಟು ಪ್ರಯಾಣಕ್ಕೆ ಸಿದ್ಧವಾದನು. ಕೌಸಲ್ಯೆಗೆ ತಡೆಯಲಾಗದ ದುಃಖ. ರಾಮನು ಬಹಳ ಹಿತವಾದ ಮಾತುಗಳಿಂದ ಆಕೆಯನ್ನು ಸಮಾಧಾನಪಡಿಸಿ ಕಾಡಿಗೆ ಹೋಗಲು ಅನುಮತಿ ಪಡೆದ.
'ನೀನಿರುವ ಕಾಡೇ ನನಗೆ ಸಾಮ್ರಾಜ್ಯ'
ತಾಯಿಯ ಮಂದಿರದಿಂದ ಶ್ರೀರಾಮನು ಸೀತೆಯ ಮಂದಿರಕ್ಕೆ ಹೋದನು. ಗಂಡನಿಗೆ ಪಟ್ಟಾಭೀಷೇಕವಾಗುತ್ತದೆ ಎಂದರೆ ಅವಳಿಗೆ ಎಷ್ಟು ಸಂತೋಷ, ಸಡಗರ! ಅವನಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡುತ್ತಾ ದಾನಗಳನ್ನು ಕೊಡುತ್ತಾ ಸಂಭ್ರಮದಿಂದಿದ್ದಳು.
ಹೆಂಡತಿಯ ಸಡಗರ, ಸಂಭ್ರಮಗಳನ್ನು ಕಂಡ ಶ್ರೀರಾಮನಿಗೆ 'ಇಂದು ಪಟ್ಟಾಭಿಷೆಕವಿಲ್ಲ' ನಾನು ಕಾಡಿಗೆ ಹೊರಟಿದ್ದೇನೆ ಎಂದು ಹೇಳುವುದು ಹೇಗೆ, ಇವಳ ಮೃದು ಮನಸ್ಸಿಗೆ ಎಷ್ಟು ಆಘಾತವಾಗುವುದೋ ಎಂದು ವ್ಯಸನವಾಯಿತು. ಪತಿಯ ಆಗಮನದಿಂದ ಸೀತೆಗೆ ಸಂತೋಷವಾಯಿತು. ಆದರೆ ಅವನ ಕೆಳಗುಂದಿದ ಮುಖವನ್ನು ಕಂಡು ಏನೋ ಪ್ರಮಾದವಾಗಿದೆ ಎಂದು ಆತಂಕಪಟ್ಟಳು.
"ಸ್ವಾಮಿ! ಇದೇನು? ಇಂತಹ ಮಹೋತ್ಸವ ಸಮಯದಲ್ಲಿ ಹೀಗೆ ಮುಖವೇಕೆ ಬಾಡಿತು? ಎಲ್ಲಿ ಯಾವ ಪ್ರಮಾದ ನಡೆಯಿತು?" ಎಂದು ತನ್ನ ಸೆರಗಿನಿಂದ ಪತಿಯ ಮುಖದ ಬೆವರುಹನಿಗಳನ್ನೊರೆಸುತ್ತ ಕೇಳಿದಳು.
ಶ್ರೀರಾಮನು 'ಜಾನಕೀ' ನಾನು ಹೇಳುವ ಸುದ್ದಿಯಿಂದ ವ್ಯಸನಪಡಬೇಡ. ಧೈರ್ಯ ತಂದುಕೋ. ನಾನೀಗ ರಾಜ್ಯದಿಂದ ಬಹು ದೂರ ಹೋಗಬೇಕಾಗಿದೆ. ನೀನು ಸಮಾಧಾನದಿಂದ ನನ್ನನ್ನು ಕಳುಹಿಸು ಎಂದು ಹೇಳಿದ. ತಂದೆಗೆ ಒದಗಿದ ಧರ್ಮಸಂಕಟವನ್ನು ವಿವರಿಸಿದ: "ನಾನು ಹದಿನಾಲ್ಕು ವರ್ಷಗಳ ಕಾಲ ಕಾಡಿಗೆ ಹೋಗಿ ಬರುತ್ತೇನೆ, ನೀನು ಕೋಪ, ಬೇಸರಗಳಿಲ್ಲದೆ ಸಮಾಧಾನದಿಂದ ಇರು. ನನ್ನ ತಂದೆ ತಾಯಿ ಮುದುಕರು. ಅವರ ಸೇವೆ ಮಾಡು. ಭರತನ ಮನಸ್ಸಿಗೂ ಹಿತವಾಗುವಂತೆ ನಡೆದುಕೊ. ನಾನೂ ಹೋಗಿ ಬರುತ್ತೇನೆ. ಒಪ್ಪಿಗೆ ಕೊಡು."
ಸೀತೆಗೆ ತುಂಬಾ ದುಃಖವಾಯಿತು. ರಾಜ್ಯಾಭಿಷೇಕ ನಿಂತುಹೋದುದಕ್ಕೆ ಆಕೆಗೆ ದುಃಖವಾಗಲಿಲ್ಲ. ಭರತನು ರಾಜನಾಗುವೆನೆಂದು ಅಸೂಯೆಯೂ ಆಗಲಿಲ್ಲ. ಅರ್ಧಾಂಗಿಯಾದ ತನ್ನನ್ನು ಬಿಟ್ಟು ಒಬ್ಬನೇ ಹೊರಡಲು ಸಿದ್ಧನಾದ ಪತಿಯನ್ನು ನೋಡಿ ಕೋಪ ಬಂದಿತು. ಆತನು ಬೋಧಿಸಿದ ನೀತಿಯನ್ನು ಮಾತ್ರ ಸಹಿಸಲಾಗಲಿಲ್ಲ. "ಪ್ರಭೂ! ನೀನಿಲ್ಲದ ಸ್ಥಳದಲ್ಲಿ ಒಂದು ನಿಮಿಷವಾದರೂ ನಾನಿರಲಾರೆ. ನೀನಿಲ್ಲದ ಈ ಅಯೋಧ್ಯೆ ನನ್ನ ಪಾಲಿಗೆ ಕಾಡಿಗಿಂತ ಕಡೆ. ನೀನಿರುವ ಕಾಡೇ ನನಗೆ ಸಾಮ್ರಾಜ್ಯ. ಸದಾ ನಾನು ನಿನ್ನ ನೆರಳಿನಲ್ಲಿ ನಡೆಯುವವಳು. ನನ್ನನ್ನು ಬಿಟ್ಟು ಹೋಗುವುದು ನಿನಗೆ ಧರ್ಮವಲ್ಲ" ಎಂದಳು.
ಶ್ರೀರಾಮನು ಅವಳಿಗೆ ವನಜೀವನದ ದುಸ್ಸಾಧ್ಯವಾದ ಕಷ್ಟಗಳನ್ನು ವಿವರಿಸಿದ. "ಸೀತಾ! ವನವೆಂದರೆ ನೀನೇನೆಂದು ತಿಳಿದಿರುವೆ? ರಾಜೋದ್ಯಾನದಂತೆ ಸುರಕ್ಷಿತ ರಮ್ಯಪ್ರದೇಶವೆಂದು ತಿಳಿದೆಯಾ? ದುಷ್ಟ ಜಂತುಗಳಿಂದ ದುರುಳ ರಾಕ್ಷಸರಿಂದ ತುಂಬಿದ ಪ್ರದೇಶ. ಘೋರಾರಣ್ಯದಲ್ಲಿ ಕರ್ಕಶ ಧ್ವನಿಗಳೇ ಕೇಳಿಬರುವುವು.
ಕಂದ ಮೂಲಗಳಲ್ಲದೆ ತಿನ್ನಲು ಮತ್ತೇನೂ ದೊರೆಯಲಾರದು. ಸುಕುಮಾರಿಯಾದ ನೀನು ಆ ಕಷ್ಟಗಳನ್ನು ಸಹಿಸಲಾರೆ. ಹೆಜ್ಜೆಹೆಜ್ಜೆಗೆ ಅಪಾಯಗಳಿಗೆ ಅಂಜುತ್ತಾ ದಿನ ಕಳೆಯಬೇಕಾದೀತು. ಹದಿನಾಲ್ಕು ವರ್ಷ ಅಷ್ಟೇನೂ ಧೀರ್ಘವಲ್ಲ" ಎಂದು ಹೇಳಿದ. ಬಗೆಬಗೆಯಾಗಿ ಸೀತೆಯನ್ನು ಒಪ್ಪಿಸುವ ಪ್ರಯತ್ನ ಮಾಡಿದ.
ಸೀತಾದೇವಿಯು 'ನೀನಿರುವ ಕಾಡೇ ನನಗೆ ಸಾಮ್ರಾಜ್ಯ' ಎಂದು ಶ್ರೀರಾಮನಿಗೆ ಹೇಳಿದಳು.
ಸೀತಾದೇವಿ ಆ ಮಾತುಗಳಿಗೆ ಕಿವಿಗೊಡಲಿಲ್ಲ. "ಕಾಡಾಗಲಿ ಊರಾಗಲಿ, ನಿನ್ನ ಸಹವಾಸದಲ್ಲಿರಬೇಕಾದುದೇ ನನ್ನ ಧರ್ಮ. ಇಲ್ಲಿನ ಸುಖವಸತಿಯನ್ನು ನಾನು ಬಯಸುವುದಿಲ್ಲ. ಅಲ್ಲಿನ ಕಷ್ಟಗಳ ಅಂಜಿಕೆಯೂ ನನಗಿಲ್ಲ. ಪುರುಷಸಿಂಹನಾದ ನೀನು ಕಾಡಿನಲ್ಲಿ ನನ್ನನ್ನು ರಕ್ಷಿಸಲಾರದಷ್ಟು ಅಸಮರ್ಥನೇ?" ಎಂದು ನಿಷ್ಠುರವಾಗಿ ಮಾತನಾಡಿದಳು. ಶೋಕದಿಂದ ಕಣ್ಣೀರುಗರೆದಳು.
ಅವಳ ಮಾತುಗಳಿಗೆ ಶ್ರೀರಾಮನು ಒಪ್ಪಲೇಬೇಕಾಯಿತು. "ಸೀತಾ! ನೀನು ಜೊತೆಯಲ್ಲಿದ್ದರೆ ನನಗೆ ಅರಣ್ಯವೇ ಸ್ವರ್ಗವಾಗುವುದು. ನಿನ್ನಿಷ್ಟಕ್ಕೆ ನನ್ನ ವಿರೋಧವೇನೂ ಇಲ್ಲ. ಪ್ರಯಾಣಕ್ಕೆ ಸಿದ್ಧಳಾಗು" ಎಂದನು. ರಾಮನ ಮಾತನ್ನು ಕೇಳಿ ಸೀತೆಗೆ ತುಂಬ ಸಂತೋಷವಾಯಿತು. ಕಾಡಿಗೆ ಹೊರಡಲು ಸಿದ್ಧತೆಗಳನ್ನು ಪ್ರಾರಂಭಿಸಿದಳು.
ಶ್ರೀರಾಮನ ತಮ್ಮ ಲಕ್ಷ್ಮಣನು ತಾನೂ ಅಣ್ಣ-ಅತ್ತಿಗೆಯರೊಂದಿಗೆ ಕಾಡಿಗೆ ಹೊರಡುತ್ತೇನೆ ಎಂದು ಪಟ್ಟುಹಿಡಿದ. ರಾಮನು ಒಪ್ಪಲೇಬೇಕಾಯಿತು.
ರಾಮ ಸೀತೆ ಲಕ್ಷ್ಮಣರು ಚಿತ್ರಕೂಟ ಪರ್ವತದಲ್ಲಿ ನೆಲಸುವ ನಿಶ್ಚಯಮಾಡಿ ಅಲ್ಲಿಗೆ ಹೊರಟರು.
ಪಾದುಕೆ ಬೇಡಿದ ಭರತ
ಅದು ಮನೋಹರ ಪ್ರದೇಶ. ಅಲ್ಲಿ ತಪೋನಿಷ್ಠರನೇಕರು ಆಶ್ರಮಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಅವರೆಲ್ಲ ಇವರನ್ನು ಆದರಿಸಿದರು. ಶ್ರೀರಾಮ, ಸೀತೆ, ಲಕ್ಷ್ಮಣರು ಒಂದು ಗುಡಿಸಲನ್ನು ಕಟ್ಟಿಕೊಂಡರು.
ಒಂದು ದಿನ ಕೈಕಯಿಯ ಪುತ್ರ ಭರತನು ದೊಡ್ಡ ಪರಿವಾರದೊಂದಿಗೆ ಇವರಿದ್ದಲ್ಲಿಗೆ ಬಂದನು. ಬೇಡಿ ಬಲಾತ್ಕರಿಸಿ ಶ್ರೀರಾಮನನ್ನೇ ಅಯೋಧ್ಯೆಗೆ ಕರೆದುಕೊಂಡು ಹೋಗಬೆಕು, ಅವನೇ ರಾಜನಾಗಲಿ ಎಂದು ಅವನ ಇಷ್ಟ.
ಭರತನು ಬಂದವನೇ ಅಣ್ಣನ ಪಾದಗಳನ್ನು ಮುಟ್ಟಿದ. ದಶರಥನು ಮರಣಹೊಂದಿದ ಎಂದು ದುಃಖದಿಂದ ತಿಳಿಸಿದ. ಅದನ್ನು ಕೇಳಿ ರಾಮ ಲಕ್ಷ್ಮಣ ಸೀತಾದೇವಿಯರಿಗೆ ದುಃಖವು ಉಕ್ಕಿ ಬಂದಿತು.
ಭರತನು ಎಷ್ಟೋ ರೀತಿಗಳಲ್ಲಿ ಶ್ರೀರಾಮನನ್ನು ಬೇಡಿಕೊಂಡನು – ನೀನೇ ಅಯೋಧ್ಯೆಗೆ ಬಂದು ರಾಜನಾಗು ಎಂದು. ಶ್ರೀರಾಮನು ಒಪ್ಪಲಿಲ್ಲ. ಕಡೆಗೆ ಬೇರೆ ಉಪಾಯ ಕಾಣದೆ ಭರತನು ಶ್ರೀರಾಮನ ಪಾದುಕೆಗಳನ್ನು ಬೇಡಿ ತೆಗೆದುಕೊಂಡ. ಅವನ್ನೇ ಸಿಂಹಾಸನದ ಮೇಲೆ ಪ್ರತಿಷ್ಠಿಸಿ ತಾನೂ ಅಣ್ಣನಂತೆಯೇ ವ್ರತಸ್ಥನಾಗಿ ನಂದೀಗ್ರಾಮದಲ್ಲಿ ನೆಲಸಿದನು.
ಚಿತ್ರಕೂಟದಿಂದ ಶ್ರೀರಾಮ ಸೀತೆ ಲಕ್ಷ್ಮಣರು ದಂಡಕಾರಣ್ಯಕ್ಕೆ ಹೋದರು.
'ಶ್ರೀರಾಮಚಂದ್ರ, ಯೋಚಿಸು'
ದಂಡಕಾರಣ್ಯದ ಮುನಿಜನರು ಇವರನ್ನು ಯಥೋಚಿತವಾಗಿ ಸತ್ಕರಿಸಿದರು. ಅವರೆಲ್ಲ ಸುತ್ತುಮುತ್ತಲಿನ ರಾಕ್ಷಸರಿಂದಲೂ, ದುಷ್ಟಮೃಗಗಳಿಂದಲೂ ತಮಗೆ ಉಂಟಾಗುತ್ತಿರುವ ಪ್ರಾಣಾಪಾಯಗಳಿಂದ ರಕ್ಷಿಸಬೇಕೆಂದು ಶ್ರೀರಾಮನಲ್ಲಿ ಮೊರೆ ಇಟ್ಟರು. ಶ್ರೀರಾಮನು ದಯಾಳು. ಅವನು ರಾಕ್ಷಸರನ್ನು ಶಿಕ್ಷಿಸಿ ಋಷಿಗಳ ತೊಂದರೆಯನ್ನು ನಿವಾರಿಸುವುದಾಗಿ ಮಾತು ಕೊಟ್ಟ.
ಇದನ್ನು ಕೇಳಿ ಸೀತಾದೇವಿಗೆ ಯೋಚನೆಯಾಯಿತು. ರಾಮನು ಮಾಡುವುದು ಸರಿಯೇ ಎನ್ನಿಸಿತು. ಸರಿಯಾದ ಸಮಯದಲ್ಲಿ ಪತಿಗೆ ಹೀಗೆ ಹೇಳಿದಳು:
"ಆರ್ಯಪುತ್ರಾ! ನನ್ನ ಮನಸ್ಸಿಗೆ ಬಂದ ಒಂದೆರಡು ವಿಚಾರಗಳನ್ನು ನಿನ್ನಲ್ಲಿ ಬಿನ್ನವಿಸಿಕೊಳ್ಳುತ್ತೇನೆ. ನಿನಗಿಂತ ಹೆಚ್ಚು ತಿಳಿದವಳೆಂದು ಭಾವಿಸಿ ನಾನೀ ಮಾತುಗಳನ್ನು ಹೇಳುವುದಿಲ್ಲ. ತಾಪಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ನೀನು ರಾಕ್ಷಸರನ್ನೂ ದುಷ್ಟಮೃಗಗಳನ್ನೂ ಸಂಹಾರ ಮಾಡುವುದಾಗಿ ವಾಗ್ದಾನ ಮಾಡಿದೆ . ರಾಜ ಚಿಹ್ನೆಗಳನ್ನೆಲ್ಲಾ ತ್ಯಜಿಸಿ ಈ ವನವಾಸವನ್ನು ಕೈಗೊಂಡಿರುವೆಯಲ್ಲವೇ? ಈಗ ಋಷಿಗಳಂಥೆ ಇರಬೇಕು. ಆಯುಧಗಳನ್ನು ಧರಿಸುವುದೂ ಈಗಿನ ನಿಷ್ಠೆಗೆ ನಿಷೇದ. ಆದರೆ ಆತ್ಮರಕ್ಷಣೆಗಾಗಿ ಬಿಲ್ಲು ಬಾಣಗಳನ್ನು ನೀವು ಧರಿಸುವುದು ಅಗತ್ಯವಾಗಿದೆ. ಈಗ ಮಾಡಿರುವ ವಾಗ್ದಾನದಿಂದ ರಾಕ್ಷಸರು ನಿನ್ನ ಶತ್ರುಗಳಾಗುತ್ತಾರೆ. ಇದು ಭಯಕ್ಕೆ ಕಾರಣ. ಯಾವ ಸಮಯದಲ್ಲಿ ಎಂತಹ ಅಪಾಯ ಒದಗಬಹುದೋ! ಅಲ್ಲದೆ ನಮಗೆ ಯಾವ ತೊಂದರೆಯನ್ನೂ ಮಾಡದಿರುವ ಮೃಗಗಳನ್ನಾಗಲಿ ರಾಕ್ಷಸರನ್ನಾಗಲಿ ಕೊಲ್ಲುವುದು ನ್ಯಾಯವೇ? ಕಾರಣವಿಲ್ಲದೆ ದ್ವೇಷದಿಂದ ಆಪತ್ತುಗಳಿಗೆ ಅವಕಾಶವಾಗಬಹುದು. ಯೋಚಿಸಿ ನೋಡು."
ಈ ಮಾತುಗಳನ್ನು ತಾಳ್ಮೆಯಿಂದ ಕೇಳಿ ಶ್ರೀರಾಮನು ಹೀಗೆಂದ:
"ದೇವೀ! ಕ್ಷತ್ರಿಯರಾದ ನಮಗೆ ದುಷ್ಟನಿಗ್ರಹ ಯಾವ ಸಮಯಕ್ಕೂ ವಿರೋಧವಲ್ಲ. ಯಾರ ತಂಟೆಗೂ ಹೋಗದೆ ತಮ್ಮ ಪಡಿಗೆ ತಾವು ಬದುಕುತ್ತಿರುವ ತಪಸ್ವಿಗಳನ್ನು ಕಂಡಕಂಡಲ್ಲಿ ರಾಕ್ಷಸರು ಕೊಂದು ತಿನ್ನಬಹುದೇ? ಆ ಕ್ರೂರಕರ್ಮಿಗಳನ್ನು ಶಿಕ್ಷಿಸುವುದು, ಸಾಧುಜನರನ್ನು ರಕ್ಷಿಸುವುದು ರಾಜಧರ್ಮ. ನೀನು ಹೇಳಿದ ಹಿತೋಕ್ತಿಗಳೂ ಯೋಚಿಸಬೇಕಾದಂತಹವು. ಬಹುದೂರ ವಿಚಾರ ಮಾಡಿದ್ವಿ. ನಾನಾದರೂ ಈ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದಲೇ ನಡೆಯುತ್ತೇನೆ. ನಿರಪರಾಧಿಗಳನ್ನು ದಂಡಿಸುವುದಿಲ್ಲ."
ಪತಿಯ ಈ ಮಾತುಗಳಿಂದ ಸೀತಾದೇವಿಗೆ ತಕ್ಕಮಟ್ಟಿಗೆ ಸಮಾಧಾನವಾಯಿತು.
ಶ್ರೀರಾಮ ಸೀತೆ ಲಕ್ಷ್ಮಣರು ಪಂಚವಟಿ ಎಂಬ ಸ್ಥಳಕ್ಕೆ ಬರುತ್ತಿರುವಾಗ ದೊಡ್ಡದೊಂದು ಆಲದಮರ ಕಾಣಿಸಿತು. ಅದರ ಮೇಲೆ ಬೃಹದಾಕಾರದ ಮುದಿ ಹದ್ದೊಂದು ಕುಳಿತಿತ್ತು. ಅದು ರಾಕ್ಷಸನೇ ಇರಬಹುದೆಂದು ಇವರಿಗೆ ಸಂದೇಹ. ಅದನ್ನು ತಿಳಿದು ಆ ಹದ್ದು "ರಘುರಾಮಾ! ನಾನು ನಿಮ್ಮ ತಂದೆ ದಶರಥ ರಾಜನ ಮಿತ್ರ. ಜಟಾಯು ಎಂದು ನನ್ನ ಹೆಸರು. ನಿಮ್ಮ ಬಂಧುವಿನಂತೆ ನನ್ನನ್ನು ತಿಳಿಯಿರಿ. ನೀನೂ ಲಕ್ಷ್ಮಣನೂ ಹೊರಕ್ಕೆ ಹೋದಾಗ ಸೀತಾದೇವಿಗೆ ನಾನು ಬೆಂಗಾವಲಾಗಿರುತ್ತೇನೆ. ಇನ್ನೂ ನಿಮಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ" ಎಂದು ಹೇಳಿತು. ಇವರಿಗೆ ಅರಣ್ಯದಲ್ಲಿಯೂ ತಮಗೆ ಆಪ್ತಬಂಧುವೊಬ್ಬನು ಇದ್ದಾನಲ್ಲ ಎಂದು ಸಂತೋಷವಾಯಿತು.
ಶ್ರೀರಾಮ, ಸೀತೆ, ಲಕ್ಷ್ಕಣರು ಪರ್ಣಶಾಲೆಯೊಂದನ್ನು ಕಟ್ಟಿಕೊಂಡು ಕೆಲವು ಕಾಲ ಅಲ್ಲಿ ನೆಮ್ಮದಿಯಾಗಿ ಕಳೆದರು. ಹತ್ತಿರದಲ್ಲೇ ಗೋದಾವರಿ ನದಿ. ಅಲ್ಲಲ್ಲಿ ಗಿರಿಗಳು, ಯಥೇಚ್ಛವಾಗಿ ಫಲ ಪುಷ್ಪಗಳನ್ನು ಹೊತ್ತ ತರುಲತೆಗಳು, ಘನವಾದ ವೃಕ್ಷಗಳು, ಹಕ್ಕಿಗಳು, ಹರಿಣಗಳು – ನೋಡಿದರೆ ಕಣ್ಣಿಗೂ ಮನಸ್ಸಿಗೂ ತುಂಬ ಸಂತೋಷವಾಗುತ್ತಿತ್ತು.
ಬಂದಳು ಶೂರ್ಪಣಖಿ
ಒಂದು ದಿನ ಒಂದು ವಿಶೇಷ ಸಂಗತಿ ನಡೆಯಿತು.
ಶೂರ್ಪಣಖಿ ಎಂಬ ರಕ್ಕಸಿಯೊಬ್ಬಳು ಆಹಾರಕ್ಕಾಗಿ ಆ ಕಡೆಯಲ್ಲಿ ಸಂಚರಿಸುತ್ತಾ ಅಲ್ಲಿ ಮನುಷ್ಯರು ಇರುವ ಸುಳಿವನ್ನರಿತು ಇವರ ಆಶ್ರಮಕ್ಕೆ ಬಂದು ಬಾಗಿಲಿನಿಂದ ಬಗ್ಗಿ ನೋಡಿದಳು.
ರಾಮ ಲಕ್ಷ್ಮಣರು ನೋಡಲು ಬಹು ಸ್ಪುರದ್ರೂಪಿಗಳು. ಶೂರ್ಪಣಖಿಗೆ ಅವರಿಬ್ಬರಲ್ಲಿ ಒಬ್ಬನನ್ನು ಮದುವೆಯಾಗಬೇಕು ಎಂದು ಆಸೆಯಾಯಿತು.
ಮಾಯಾವಿಯಾದ ಆ ರಕ್ಕಸಿ ಸುಂದರ ತರುಣಿಯಂತೆ ರೂಪ ತಾಳಿದಳು.
"ನನ್ನನ್ನು ಮದುವೆಯಾಗು" ಎಂದು ಶ್ರೀರಾಮನನ್ನು ಕೇಳಿದಳು.
ಶ್ರೀರಾಮನು "ನನಗೆ ಪತ್ನಿ ಜೊತೆಯಲ್ಲೇ ಇದ್ದಾಳೆ. ಅವಳಿಗೆ ಸವತಿಯಾಗಿ ತೊಂದರೆಪಡುವುದು ಬೇಡ. ನನ್ನ ತಮ್ಮ ಒಬ್ಬನೇ ಇದ್ದಾನೆ. ಅವನೂ ರೂಪವಂತ, ಬುದ್ಧಿವಂತ. ಅವನನ್ನು ವರಿಸು" ಎಂದನು.
ಶೂರ್ಪಣಖಿ ಲಕ್ಷ್ಮಣನ ಬಳಿಗೆ ಬಂದು, "ನನ್ನನ್ನು ಮದುವೆಯಾಗು" ಎಂದು ಕೇಳಿದಳು.
'ನಾನು ಶ್ರೀರಾಮನ ಹೆಂಡತಿ. ಭಾಗ್ಯವೋ ಬಡತನವೋ ಅವನ ಜೊತೆಗೇ ನನಗಿರಲಿ.'
ಲಕ್ಷ್ಮಣನು "ನಾನು ರಾಮನ ಸೇವಕ. ನನ್ನ ಕೈ ಹಿಡಿದರೆ ನೀನೂ ಸೇವಕಿಯೇ. ಸೀತಾದೇವಿಯ ಸೇವೆಯನ್ನು ಮಾಡಬೇಕಾದೀತು. ರಾಮನನ್ನೇ ಕೇಳಿಕೋ ಹೋಗು" ಎಂದು ರಾಮನ ಬಳಿಗೇ ಕಳುಹಿಸಿದನು.
ಅಣ್ಣತಮ್ಮಂದಿರಿಗೆ ಇದೊಂದು ಸರಸವಾಯಿತು. ಅಣ್ಣನು ತಮ್ಮನ ಕಡೆಗೆ ಕಳಿಸುವನು. ತಮ್ಮನ್ನು ಅಣ್ಣನಲ್ಲಿಗೆ ತೊಲಗಿಸುವನು. ಅವಳಿಗೆ ಸಾಕಾಗಿಹೋಯಿತು. "ಹೆಂಡತಿ ಇರುವುದರಿಂದಲ್ಲವೇ ರಾಮನು ಹೀಗಾಡುತ್ತಿರುವುದು? ನಾನಿವಳನ್ನು ತಿಂದುಬಿಡುತ್ತೇನೆ" ಅನ್ನುತ್ತಾ ಅವಳು ಸೀತಾದೇವಿಯ ಮೇಲೆ ಬೀಳಲು ಬಂದಳು.
ಆಗ ಶ್ರೀರಾಮನು "ದುಷ್ಟರೊಂದಿಗೆ ವಿನೋದ ಸಲ್ಲದು. ಇವಳಿಗೆ ತಕ್ಕ ಶಿಕ್ಷೆಯನ್ನು ಮಾಡಿ ಓಡಿಸು' ' ಎಂದು ತಮ್ಮನಿಗೆ ಹೇಳಿದನು. ಲಕ್ಷ್ಮಣು ಆ ರಕ್ಕಸಿಯ ಕಿವಿ ಮೂಗುಗಳನ್ನು ಕೊಯ್ದುಬಿಟ್ಟನು.
ಶೂರ್ಪಣಖಿಗೆ ನೋವು. ಅದಕ್ಕಿಂತ ಹೆಚ್ಚಾಗಿ ಅವಮಾನ. ಅವಳು ಅಬ್ಬರಿಸುತ್ತಾ ಓಡಿದಳು.
ಶೂರ್ಪಣಖಿ ಲಂಕಾಧಿಪತಿಯಾದ ರಾವಣಾಸುರನ ತಂಗಿ. ರಾವಣ ಬಹು ಬಲಶಾಲಿ. ಜನಸ್ಥಾನ ಎಂಬ ಪ್ರದೇಶಕ್ಕೆ ಒಡೆಯನಾಗಿದ್ದ ಖರನೆಂಬ ರಾಕ್ಷಸನು ಅವನ ತಮ್ಮ. ಶೂರ್ಪಣಖಿ ಅವನಲ್ಲಿಗೆ ಹೋಗಿ ತನಗಾದ ಅಪಮಾನವನ್ನು ತಿಳಿಸಿ ಗೋಳಿಟ್ಟಳು. ಮಹಾರೋಷದಿಂದ ಖರನು ತನ್ನ ಸಕಲ ಸೈನ್ಯವನ್ನೂ ಕಟ್ಟಿಕೊಂಡು ರಾಮ ಲಕ್ಷ್ಮಣರ ಮೇಲೆ ದಂಡೆತ್ತಿ ಬಂದನು. ಅವನೂ ಅವನ ಸೈನ್ಯವೂ ರಾಮಬಾಣಕ್ಕೆ ಬಲಿಯಾದರು. ಮಹರ್ಷಿಗಳೆಲ್ಲ ಶ್ರೀರಾಮನನ್ನು ಕೊಂಡಾಡಿದರು. ಸೀತೆಗೂ ಸಂತೋಷವಾಯಿತು. ಆದರೂ ಯಾವುದೋ ಒಂದು ಅಳುಕು ಮನಸ್ಸನ್ನು ಹೊಕ್ಕು ಚಿಂತೆಗಡೆಮಾಡಿತು.
ರಾವಣನ ದುಷ್ಟ ಯೋಚನೆ
ಶೂರ್ಪಣಖಿ ಲಂಕೆಗೆ ಓಡಿದಳು. ಅಣ್ಣನ ಆಸ್ಥಾನದಲ್ಲಿ ಗೊಳೋ ಎಂದು ಅತ್ತಳು. ತನ್ನ ಅಪಮಾನದ ಕಥೆಯನ್ನೂ ಖರನೂ ಸೈನ್ಯವೂ ನಾಶವಾದ ಕಥೆಯನ್ನೂ ಹೇಳಿ ಸೀತೆಯ ಸೌಂದರ್ಯವನ್ನೂ ವರ್ಣಿಸಿದಳು.